ಎರ್ಮಾಳು: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,ಓರ್ವ ಸಾವು
ಪಡುಬಿದ್ರಿ:ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೋಟಕ್ಕೆ ಉರುಳಿ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ಘಟಸಿದೆ.
ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಕುಡುಪು ನಿವಾಸಿ ಅಭಿಷೇಕ್ (ಅಭಿ) ಎಂದು ಗುರುತಿಸಲಾಗಿದೆ.
ಕಾಪು ಮೂಳೂರಿನ ಸಾಯಿರಾಧ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರೊಂದಿಗೆ ಭಾಗವಹಿಸಿ
ಹಿಂದಿರುಗುವಾಗ ಕಾರು ಹಠಾತ್ತನೆ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಈ ಘಟನೆ ನಡೆದಿದ್ದು, ಕಾರಿನ ಮಾಲಕ ಅಭಿಯವರೇ ಕಾರನ್ನು ಚಲಾಯಿಸುತ್ತಿದ್ದು ಅವರ ಕಾರಿನಲ್ಲಿ ಅವರೊಬ್ಬರೇ ಇದ್ದಿದ್ದು, ಸ್ನೇಹಿತರು ಹಿಂದಿನ ವಾಹನಗಳಲ್ಲಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಧರಾಶಾಯಿಯಾಗಿ, ಕಾರು ನಜ್ಜುಗುಜ್ಜಾಗಿದ್ದು. ಈ ಸಂದರ್ಭ ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.ಕೂಡಲೇ ಅಭಿಯವರನ್ನು ಸ್ಥಳೀಯರ ಸಹಕಾರದಿಂದ ಆತನ ಸ್ನೇಹಿತರು ಮುಕ್ಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆಂದು ತಿಳಿದು ಬಂದಿದೆ.
ಶ್ರಮ ಜೀವಿಯಾಗಿದ್ದ ಅಭಿ ಕಷ್ಟದಿಂದ ಮೇಲೆ ಬಂದು ತನ್ನದೇ ಇವೆಂಟ್ ತಂಡ ಕಟ್ಟಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















