ಪುನಃ ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ಮಾಜಿ ಸಚಿವ ವಿ. ಸುನಿಲ್ ಕುಮಾರ್ ಎಚ್ಚರಿಕೆ!

ಉಡುಪಿ : ನೂತನ ರಾಜ್ಯ ಸರಕಾರ ಪುನಃ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂಡ 1 ತಿಂಗಳ ಅವಧಿಯೊಳಗೆ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವುದಾಗಿ ಹೇಳಿರುವುದು ಆಶ್ಚರ್ಯ ಪಡುವಂತಹ ಸಂಗತಿ. ರಾಷ್ಟ್ರೀಯತೆ, ಸಂಸ್ಕೃತಿ, ದೇಶಪ್ರೇಮ ಇವೆಲ್ಲವೂ ಪಠ್ಯ ಪುಸ್ತಕದಲ್ಲಿ ಬರಬೇಕಾಗಿರುವುದು ಇವತ್ತಿನ ಅನಿವಾರ್ಯತೆಯಾಗಿದೆ. ಹಾಗಾದರೆ ಕಾಂಗ್ರೆಸ್ ಗೆ ಇನ್ನೆಂಥಹ ಶಿಕ್ಷಣ ಬೇಕಾಗಿದೆ ಎಂದು ಪ್ರಶ್ನಿಸಿದರು. ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತೊಮ್ಮೆ ಗಾಂಧಿ ಕುಟುಂಬ ಪ್ರೇರಿತ ಶಿಕ್ಷಣವನ್ನು ರೂಪಿಸಲು ಹೋಗಿರುವುದು ದುರದುಷ್ಟ ಸಂಗತಿ. ಮುಂದಿನ ಪೀಳಿಗೆಯನ್ನು ಕಣ್ಮುಂದೆ ಇಟ್ಟುಕೊಂಡು ಸರ್ಕಾರ ನಡೆಸಬೇಕೇ ಹೊರತು, ತನಗೆ ಅಧಿಕಾರ ಕೊಟ್ಟವರ ಋಣ ತೀರಿಸುವುದಕ್ಕಲ್ಲ. ಸರಕಾರದ ಮಂತ್ರಿಗಳಿಗೆ ಇಲಾಖೆಯನ್ನು ಅರ್ಥಮಾಡಿಕೊಳ್ಳಲು ಕನಿಷ್ಠ 2-3 ತಿಂಗಳು ಅವಕಾಶ ಕೊಡಿ. ಇದನ್ನು ಬಿಟ್ಟು ಬಿಜೆಪಿ ಕಾಲದಲ್ಲಿ ಮಾಡದ ಎಲ್ಲ ಕೆಲಸಗಳನ್ನು ಒಂದೇ ತಿಂಗಳಲ್ಲಿ ಮಾಡುತ್ತೇವೆ ಎಂಬ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ನೆಪದಲ್ಲಿ ಕಾಂಗ್ರೆಸ್ ರಾಷ್ಟ್ರೀಕರಣವನ್ನು ವಿರೋಧಿಸಿದರೆ, ಜನರು ದೊಡ್ಡ ಪ್ರಮಾಣದಲ್ಲಿ ಬುದ್ಧಿ ಕಳಿಸುತ್ತಾರೆ ಹಾಗೂ ಬಿಜೆಪಿ ಕೂಡ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುತ್ತದೆ ಎಂದು ಎಚ್ಚರಿಸಿದರು.