ಈ ಮಳೆಗಾಲ ಸರಿಯಾಗಿರದೆ ಕರ್ನಾಟಕದ 223 ತಾಲೂಕುಗಳು ಬರಪೀಡಿತ. ಸೋಮಾರಿ ಕೇಂದ್ರ ಸರಕಾರ ಪರಿಹಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಸದ್ಯ ಬಾಧಿತ ರೈತರಿಗೆ ರೂಪಾಯಿ 2,000ದಷ್ಟಾದರೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಕಚೇರಿ ಕೃಷ್ಣದಲ್ಲಿ ಅವರು ಮಂತ್ರಿ ಮತ್ತು ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು. ಕೇಂದ್ರ ಸರಕಾರವು ತನ್ನ ಕಿಸೆಯಿಂದ ಪರಿಹಾರ ನೀಡುವುದಿಲ್ಲ. ರಾಜ್ಯದ ತೆರಿಗೆ ಪಾಲು ನೀಡದೆ ಬಾಕಿ ಉಳಿಸಿಕೊಂಡಿದೆ. ರಾಜ್ಯದಲ್ಲಿ ಬರದ ಕಾರಣ 4,463 ಕೋಟಿ ರೂಪಾಯಿ ನಷ್ಟ ಆಗಿದೆ. ಈ ಬಗೆಗೆ ಕೇಂದ್ರ ಸರಕಾರಕ್ಕೆ ಬರೆಯಲಾಗಿತ್ತು. ಪ್ರಧಾನಿ ಮೋದಿಯವರು ಈ ಬಗೆಗೆ ಮಂತ್ರಿ ಸಭೆ ನಡೆಸಿ ಚರ್ಚೆ ನಡೆಸಿಯೂ ಇಲ್ಲ ಎಂದು ಸಿದ್ದರಾಮಯ್ಯನವರು ಹೇಳಿದರು.
ರಾಜ್ಯದಿಂದ ಕೇಂದ್ರದಲ್ಲಿ ಮಂತ್ರಿ ಆಗಿರುವವರು, ರಾಜ್ಯದ ಬಿಜೆಪಿ ಸಂಸದರು ಈ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲಿ ಒಬ್ಬರಿಗೆ ವರುಷಕ್ಕೆ 150 ದಿನಗಳ ಕೆಲಸ ಒದಗಿಸುವಂತೆ ಕೇಳಲಾಗಿತ್ತು. ಅದಕ್ಕೂ ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

