ಮಾರಿಷಸ್ ದೇಶದಲ್ಲಿ ಸುಳ್ಯದ ವಿದ್ಯಾರ್ಥಿ ಸಾವು

ಸುಳ್ಯ: ಮಾರಿಷಸ್ ದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಳ್ಯದ ಯುವಕನೋರ್ವ ಅಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆಯ ಜಯಲಕ್ಷ್ಮಿ ಎಂಬವರ ಪುತ್ರ ನಂದನ ಎಸ್. ಭಟ್ (25) ಮೃತರು. ನಂದನ ಅವರು ಮಾರಿಷಸ್ ದೇಶದಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಜಲಪಾತ ವೀಕ್ಷಣೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಘಟನೆ ನಿನ್ನೆ ನಡೆದಿದೆ ಎನ್ನಲಾಗಿದ್ದು, ಮೃತದೇಹವನ್ನು ಅಲ್ಲಿನ ಸರಕಾರಿ ವ್ಯವಸ್ಥೆ ಮೂಲಕ ಹಾಗೂ ಇಲ್ಲಿನ ಸರಕಾರದ ಸಹಾಯದಿಂದ ಕರೆತರಲು ವ್ಯವಸ್ಥೆ ಮಾಡುವಂತೆ ಮೃತ ಯುವಕನ ತಾಯಿಯ ತಮ್ಮ ಕಾರ್ಕಳದ ಸತ್ಯನಾರಾಯಣ ಭಟ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿ ಪೂರಕ ಕ್ರಮಕ್ಕೆ ವಿನಂತಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೂಡ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.
ನಂದನ ಅವರು ಮಾರಿಷಸ್ ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆಂಡ್ ಟೂರಿಸಮ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Related Posts

Leave a Reply

Your email address will not be published.