ತುಂಬಿ ಹರಿಯುತ್ತಿರುವ ಸ್ವರ್ಣನದಿ: ಮುನ್ನೆಚ್ಚರಿಕೆ ವಹಿಸಿದ್ದರಿಂದ ನೆರೆ ಭೀತಿ ದೂರ
ಕಾರ್ಕಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸ್ವರ್ಣ ನದಿ ತುಂಬಿ ಹರಿಯುತ್ತಿದೆ. ದುರ್ಗ ಗ್ರಾಮದ ಮುಂಡ್ಲಿ ಬಲ್ಮೆಗುಂಡಿಯಲ್ಲಿ ನಿರ್ಮಾಣಗೊಂಡಿರುವ ಕಿಂಡಿಅಣೆಕಟ್ಟಿಗೆ ಅಳವಡಿಸಿದ ಸ್ವಯಂ ಚಾಲಿತ ಗೇಟ್ ನ್ನು ತೆರವು ಗೊಳಿಸಿರುವುದರಿಂದ ಮಳೆ ನೀರು ಹೊರ ಹರಿದು ಹೋಗಿರುವುದರಿಂದ ಕಳೆದ ಕೆಲ ವರ್ಷಗಳಿಂದ ಇದೇ ಪರಿಸರದಲ್ಲಿ ಎದುರಾಗುತ್ತಿದ್ದ ಕೃತಕ ನೆರೆಗೆ ಮುಕ್ತಿ ದೊರೆತ್ತಿದೆ.
ನಗರ ಪ್ರದೇಶಕ್ಕೆ ಕುಡಿಯುವ ನೀರು ಮುಂಡ್ಲಿಯ ಸ್ವರ್ಣ ನದಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬರೀ ಮಳೆ ಎದುರಾಗುವ ದಿನಗಳಲ್ಲಿ, ವಿದ್ಯುತ್ ಅಭಾವದ ದಿನಗಳಲ್ಲಿ, ಕಡು ಬೇಸಿಗೆಯ ಸಂದರ್ಭದಲ್ಲಿ ಇಲ್ಲಿಂದ ನೀರು ಸರಬರಾಜು ಮಾಡಲು ಸಾಧ್ಯವಾಗದೇ ರಾಮಸಮುದ್ರದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
ಗ್ರಾಮೀಣ ಭಾಗದ ಜನ ಸಂಚಾರದ ಕೊಂಡಿಯಾಗಿರುವ ಮುಂಡ್ಲಿ ಸೇತುವೆಯು 1994ರ ಬಳಿಕ ತೀರಾ ಅಪಾಯ ಸ್ಥಿತಿಗೆ ತಲುಪಿದೆ. ಅಣ್ಣಿಕಟ್ಟು ನಿರ್ಮಾಣ, ವಿದ್ಯುತ್ ಘಟಕ ಸ್ಥಾಪನೆಯ ಸಂದರ್ಭದಲ್ಲಿ ಕರಿಬಂಡೆಯನ್ನು ಛಿದ್ರಗೊಳಿಸುವ ಉದ್ದೇಶದಿಂದ ಬಳಸಲಾಗಿದ್ದ ಭಾರೀ ಪ್ರಮಾಣದ ಸ್ಪೋಟಕಗಳಿಂದಾಗಿ ಸೇತುವೆಯ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡಿದೆ.
ಮಳೆಗಾಲದಲ್ಲಿ ಮುಂಡ್ಲಿ ಅಣೆಕಟ್ಟಿನಿಂದ ಹೊರಬಿಡಲಾಗುವ ನೀರು ಪ್ರವಾಹವು ಸೇತುವೆಯ ಆಧಾರದ ಕಂಬಕ್ಕೆ ಅಪ್ಪಳಿಸುವುದರಿಂದ ಸೇತುವೆಯ ಕಂಬಗಳ ತಳಭಾಗವು ದುರ್ಬಲವಾಗುತ್ತಾ ಹೋಗಿದೆ.