ಪುತ್ತೂರು:ಬನ್ನೂರು ಪಂಚಾಯತ್ ವ್ಯಾಪ್ತಿಯ ಸೇಡಿಯಾಪಿನಲ್ಲಿ ಹೆಜ್ಜೇನು ದಾಳಿಗೆ ವಿದ್ಯಾರ್ಥಿನಿ ಬಲಿ

ಪುತ್ತೂರು: ಪಡೂರು ಗ್ರಾಮದ ಸೇಡಿಯಾಪು ಕೂಟೇಲು ಸಮೀಪ ಹೆಚ್ಚೇನು ದಾಳಿಗೆ ಗಂಭೀರಗೊಂಡಿದ್ದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿದ್ದು, ಹೆಜ್ಜೇನು ದಾಳಿ ಸಂದರ್ಭರಕ್ಷಣೆಗೆ ಹೋದ ವ್ಯಕ್ತಿ ಚೇತರಿಕೆಯಾಗಿದ್ದಾರೆ.
ಅ.10ರಂದು ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಮತ್ತು ಗಾಯಗೊಂಡ ವ್ಯಕ್ತಿಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.11ರಂದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಪಡೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ(7ವ) ಮೃತಪಟ್ಟವರು. ಅ.10 ರಂದು ಸಂಜೆ ವಿದ್ಯಾರ್ಥಿಗಳಾದ ಪಡೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಇಶಾ (7ವ) ಮತ್ತು ಕಿಶೋರ್ ಎಂಬವರ ಪುತ್ರ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಪ್ರತ್ಯಶ್ (10ವ) ಮತ್ತು ಸ್ಥಳೀಯ ನಾರಾಯಣ್ (40ವ) ಹೆಚ್ಚೇನು ದಾಳಿಗೊಳಗಾಗಿದ್ದರು.
ಸಂಜೆ ಮನೆಗೆ ತೆರಳುತ್ತಿದ್ದಾಗ ಕೂಟೇಲು ಸಮೀಪ ಹೆಚ್ಚೇನುಗಳು ಏಕಾಏಕಿ ವಿದ್ಯಾರ್ಥಿಗಳಿಬ್ಬರ ಮೇಲೆ ದಾಳಿ ಮಾಡಿದೆ. ವಿದ್ಯಾರ್ಥಿಗಳು ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ವಿದ್ಯಾರ್ಥಿಗಳ ರಕ್ಷಣೆಗೆ ಬಂದಿದ್ದರು. ಈ ವೇಳೆ ಹೆಚ್ಚೇನು ಅವರಿಗೂ ಕಚ್ಚಿದೆ. ಗಾಯಗೊಂಡ ನಾರಾಯಣ್ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿದ್ಯಾರ್ಥಿಗಳಿಬ್ಬರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಳುಗಳ ಪೈಕಿ ತೀವ್ರ ಅಸ್ವಸ್ಥಗೊಂಡ ಇಶಾ ಎಂಬವರನ್ನು ಮಂಗಳೂರು ಅಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪ್ರತ್ಯಶ್ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಕೂಡಾ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ