ವಿಟ್ಲ: ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ
ಕನ್ಯಾನ ಗ್ರಾಮದ ದೇಲಂತಬೆಟ್ಟು ದ.ಕ.ಜಿ.ಪಂ.ಉನ್ನತ ಹಿ.ಪ್ರಾ.ಶಾಲೆಯ ಅಮೃತ ಮಹೋತ್ಸವ ಸಮಾರಂಭ ಅಮೃತ ಸಿಂಚನ ಕಾರ್ಯಕ್ರಮ ಜ.13ರಂದು ನಡೆಯಲಿದೆ. 1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಅಧ್ಯಕ್ಷ ಡಿ.ಶ್ರೀನಿವಾಸ್ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.13ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ.ನಾರಾಯಣ ರಾವ್ ಧ್ವಜಾರೋಹಣಗೈಯಲಿದ್ದಾರೆ. ಬಳಿಕ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ, ಪುಟಾಣಿಗಳ ಹಬ್ಬ ನಡೆಯಲಿದೆ. ಎಂ.ಅಪೂರ್ವ ಅನಂತರಾವ್ ಪುಟಾಣಿಗಳ ಹಬ್ಬ ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಬಳಿಕ ನಡೆಯಲಿರುವ ಸಾಂಸ್ಕೃತಿಕ ವೈಭವಕ್ಕೆ ಉದಯಶಂಕರ ದೇಲಂತಬೆಟ್ಟು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಡಿ.ಬಿ.ಅಬ್ದುಲ್ ರಹಿಮಾನ್, ಎಸ್ಡಿಎಂಸಿ ಅಧ್ಯಕ್ಷ ಬಿ.ಕೆ.ಇಬ್ರಾಹಿಂ, ಗ್ರಾ.ಪಂ.ಸದಸ್ಯ ಮೊದಿನ್ಕುಂಞಿ ಬರಿಕಟ್ಟೆ, ಗೌರವ ಸಲಹೆಗಾರ ಡಿ.ನಾರಾಯಣ ರಾವ್, ಕಾನೂನು ಸಲಹೆಗಾರ ಡಿ.ಬಿ.ಅಬ್ದುಲ್ಖಾದರ್, ಕೋಶಾಧಿಕಾರಿ ಶಿವರಾಮ ಆಚಾರ್ಯ, ಪ್ರಚಾರ ಸಮಿತಿಯ ರಾಜೇಶ್ ಉಪಸ್ಥಿತರಿದ್ದರು.