ದಿಲ್ಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರೀವಾಲ್ ಮುಂದುವರಿಯಲಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದರು.
ಅರವಿಂದ ಕೇಜ್ರೀವಾಲ್ ಅವರು ಮೌಲ್ಯದ ಪ್ರಶ್ನೆ ಬಂದಾಗ ಹತ್ತು ವರುಷದ ಹಿಂದೆ 49 ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ರಾಜಕೀಯ ಸಂಚಿನ ಫಲವಾಗಿ ಕೇಜ್ರೀವಾಲ್ ಜೈಲಿನಲ್ಲಿ ಇದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದರು.
ಮುಖ್ಯಮಂತ್ರಿ ಉತ್ಸವ ಮೂರ್ತಿ ಅಲ್ಲ, ದೀರ್ಘ ಕಾಲ ಅಜ್ಞಾತದಲ್ಲಿ ಇರಬಾರದು ಎಂಬ ದಿಲ್ಲಿಯ ಹೈಕೋರ್ಟ್ ಮಾತಿಗೆ ಸಂಜಯ್ ಸಿಂಗ್ ಹೀಗೆ ಉತ್ತರಿಸಿದರು. ಅರವಿಂದ ಕೇಜ್ರೀವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡುವಂತೆ ಕೋರಿದ್ದ ಮೂರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಅದೇ ಹೈಕೋರ್ಟು ವಜಾ ಮಾಡಿದೆ ಎಂದು ಅವರು ತಿಳಿಸಿದರು.

