ಹಾಸನ: ಹಾಸನಾಂಬ ದೇವಿ ದರ್ಶನದ ಬಳಿಕ ಭೀಕರ ಅಪಘಾತ: ಇಬ್ಬರ ಸಾವು

ಹಾಸನಾಂಬ ದೇವಿ ದರ್ಶನ ಮುಗಿಸಿ ವಾಪಾಸ್ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಬಸವರಾಜು ಮತ್ತು ಅನುಶ್ರೀ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಛಾಯಾ (20) ಹಾಗೂ ಮತ್ತೊಂದು ಬೈಕ್ ಸವಾರ ಮೊಹಮ್ಮದ್ ಶಾಹಿದ್ ಅವರನ್ನು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಛಾಯಾ ಅವರ ಸ್ಥಿತಿ ಚಿಂತಾಜನಕವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಸವರಾಜು ತಮ್ಮ ಸ್ನೇಹಿತರು ಅನುಶ್ರೀ ಮತ್ತು ಛಾಯಾ ಅವರೊಂದಿಗೆ ಯಮಹಾ ಬೈಕ್ನಲ್ಲಿ ಹಾಸನಾಂಬ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿ ಬೆಂಗಳೂರಿನತ್ತ ವಾಪಸ್ ಹೊರಟಿದ್ದ ವೇಳೆ, ಚನ್ನರಾಯಪಟ್ಟಣ ದಿಕ್ಕಿನಿಂದ ವೇಗವಾಗಿ ಬಂದ KA-13 P-1521 ನಂಬರಿನ ಇನ್ನೋವಾ ಕಾರು ಮೊದಲು ಆ್ಯಕ್ಟಿವಾ ಹೋಂಡಾಗೆ ಡಿಕ್ಕಿ ಹೊಡೆದು ನಂತರ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಭೀಕರ ಡಿಕ್ಕಿಯಿಂದ ಬೈಕ್ ಸವಾರರು ರಸ್ತೆ ಬದಿಯ ಅರಣ್ಯಕ್ಕೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಬಸವರಾಜು ಹಾಗೂ ಅನುಶ್ರೀ ಮೃತಪಟ್ಟಿದ್ದಾರೆ. ಕಾರು ಸಹ ಅರಣ್ಯಕ್ಕೆ ನುಗ್ಗಿದ ಘಟನೆ ಸಾಕ್ಷಿಗಳಿಂದ ತಿಳಿದುಬಂದಿದೆ. ಘಟನೆ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.