ಮೂಡುಬಿದಿರೆ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೂಡುಬಿದಿರೆಯ ತೋಡಾರಿನಲ್ಲಿರುವ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಮುಗಿಸಿದ 300 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ನೊವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸಹಸ್ಥಾಪಕ ಮಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಮಾಜ ನಿರ್ಮಾಣದ ಕಾರ್ಯದಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಮಹತ್ತರವಾದ ಜವಾಬ್ದಾರಿಯಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆವಿಷ್ಕಾರ ಮತ್ತು ನಾವೀನ್ಯತೆಯೊಂದಿಗೆ ಪರಿಹಾರ ಕಂಡುಕೊಳ್ಳಬೇಕು. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು ಎಂದರು.

ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಯೆನೆಪೋಯ ಆಬ್ದುಲ್ಲ ಕುಂಞ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ಗಳಿಸುವುದು ಮುಂದಿನ ಉತ್ತಮ ಭವಿಷ್ಯದ ಮೆಟ್ಟಿಲು. ಜ್ಞಾನವು ಶಕ್ತಿಯ ಸಂಪತ್ತು. ಜ್ಞಾನ ಸಂಪಾದನೆ ಪದವಿ ಗಳಿಸುವುದರೊಂದಿಗೆ ಕೊನೆಗೊಳ್ಳುವುದಿಲ್ಲ. ಜೀವನದಲ್ಲಿ ಕಲಿಕೆಯು ನಿರಂತರ ಪ್ರಕ್ರಿಯೆ ಎಂದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸುಮಾರು ೫೧ ವಿದ್ಯಾರ್ಥಿಗಳಿಗೆ , ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸುಮಾರು ೪೮ ವಿದ್ಯಾರ್ಥಿಗಳಿಗೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಸುಮಾರು ೫೫ ವಿದ್ಯಾರ್ಥಿಗಳಿಗೆ, ಮಾಹಿತಿ ತಂತ್ರಜ್ಞಾನ ವಿಭಾಗದ ಸುಮಾರು ೬೦ ವಿದ್ಯಾರ್ಥಿಗಳಿಗೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸುಮಾರು ೮೬ ವಿದ್ಯಾರ್ಥಿಗಳಿಗೆ ಒಟ್ಟು300ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಯೆನೆಪೋಯ ಗ್ರೂಪ್ನ ಕಾರ್ಯಾಚರಣೆಗಳ ನಿರ್ದೇಶಕರಾದ ಯೆನೆಪೋಯ ಅಬ್ದುಲ್ಲಾ ಜಾವೇದ್ , ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ನ ಟ್ರಸ್ಟೀ ರಾಮಚಂದ್ರ ಶೆಟ್ಟಿ, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ನ ಕಾರ್ಯದರ್ಶಿ,ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಅಖ್ತರ್ ಹುಸೇನ್, ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಸ್ಮಿತಾ ಅತಿಥಿಗಳ ಪರಿಚಯ ಮಾಡಿದರು. ಅಮನ್ ಪ್ರಾರ್ಥಿಸಿದರು. ಪ್ರೊ. ನಾಝಿಯಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರಾಜ್ ಕಿರಣ್ ಶೆಟ್ಟಿ ವಂದಿಸಿದರು.