ಪುತ್ತೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿದ್ಯಾಧರ. ಎನ್

ಪುತ್ತೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಸುಧೀರ್ಘ 33 ವರ್ಷ ಸೇವೆ ಸಲ್ಲಿಸಿದ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ವಿದ್ಯಾಧರ ಎನ್. ನಿವೃತ್ತಿ ಹೊಂದಿ ಫೆ. 3 ರಂದು ಹುಟ್ಟೂರಿಗೆ ಆಗಮಿಸುತ್ತಿದ್ದಾರೆ.
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ದಿ. ಮಹಾಲಿಂಗ ಪಾಟಾಳಿ ಮತ್ತು ಗಿರಿಜಾ ದಂಪತಿ ಪುತ್ರನಾದ ವಿದ್ಯಾಧರ ಎನ್. ಅವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢಶಿಕ್ಷಣವನ್ನು ಶ್ರೀ ಪಂಚಲಿಗೇಶ್ವರ ಪ್ರೌಢಶಾಲೆ ಈಶ್ವರನುಂಗಲದಲ್ಲಿ ಪಡೆದಿರುತ್ತಾರೆ. ಅನಂತರ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು, 1990ರ ಡಿಸೆಂಬರ್ನಲ್ಲಿ ಕೇಂದ್ರೀಯ ಮೀಸಲು ಪೋಲಿಸ್ ಸೇನಾ ಪಡೆಗೆ ಸೇರ್ಪಡೆಗೊಂಡಿದ್ದರು.
ರಾಜಸ್ಥಾನದ ಅಜ್ಮೀರ್ ಮತ್ತು ಉತ್ತರ ಪ್ರದೇಶದ ಆಲಿಗಡ್ನಲ್ಲಿ ಬೇಸಿಕ್ ಟ್ರೈನಿಂಗ್ ಮುಗಿಸಿದ ನಂತರ ಪಂಜಾಬ್, ಚಂಡೀಗಢ, ಜಮ್ಮು ಕಾಶ್ಮೀರ, ದೆಹಲಿ, ಅಸ್ಲಾಂ, ಆಂಧ್ರಪ್ರದೇಶ, ನಾಗಪುರ್ (ಮಹಾರಾಷ್ಟ್ರ), ಬೆಂಗಳೂರು, ಕೊಯಮುತ್ತೂರು, ವಿಜಯನಾಡ ಮತ್ತು ಛತ್ತೀಸ್ಗಡ್ಗಳಲ್ಲಿ 33 ವರ್ಷಗಳ ಕಾಲ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅತೀ ಉತ್ಕೃಷ್ಟ ಸೇವಾ ಪದಕ ಪ್ರಶಸ್ತಿಪಡೆದಿರುತ್ತಾರೆ.
ಫೆ.3ರಂದು ಪಟ್ಟೆಯ ಮನೆಯಲ್ಲಿ ಅವರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವರ ಸಹೋದರರಾದ ಸುಬ್ಬಪ್ಪ ಪಾಟಲಿ ಭಾರತೀಯ ಸೇನೆ ಹಾಗೂ ಇನ್ನೊರ್ವ ಸಹೋದರ ಸಿ. ಆರ್. ಪಿ. ಎಫ್. ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
