ಬಂಟ್ವಾಳ: ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಉಮೇಶ್ ಮಠದಬೆಟ್ಟು

ಬಂಟ್ವಾಳ: ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ ಯುವಕನ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಹಂಚಿಕಟ್ಟೆಯ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದ್ದು, ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ನರ್ಸರಿ ಕಟ್ಟಿದ್ದರು. ಮೇ 14ರಂದು ಸಂಜೆ 6ರ ಸುಮಾರಿಗೆ ಅವರ ಪುತ್ರ ಅಭಿಷೇಕ್ (3) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದನು. ತಾಯಿ ಮನೆಯೊಳಗೆ ಇದ್ದು, ತಂದೆ ನೋಣಯ್ಯ ಅವರು ಕೆಲಸ ಮುಗಿಸಿ ಬಂದು ಹೊರಗೆ ಹೋಗಿದ್ದರು. ಆಡುತ್ತಿದ್ದ ಅಭಿಷೇಕ್ ಬಾವಿಯ ಕಟ್ಟೆಯನ್ನು ಹತ್ತಿ ಹಸಿರು ಬಣ್ಣದ ನರ್ಸರಿ ಹೋಗಿದ್ದು, ಮಧ್ಯಕ್ಕೆ ತಲುಪುವ ವೇಳೆ ಅದು ಭಾರದಿಂದ ಹರಿದಿದೆ. ಈ ವೇಳೆ ಮಗು ಏಕಾಏಕಿ ಬಾವಿಗೆ ಬಿದ್ದಿದೆ.
ನೀರಿಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದಾಗ ಮಗು ನೀರಿಗೆ ಬಿದ್ದಿದೆ. ಬಳಿಕ ಬೊಬ್ಬೆ ಹಾಕಿದಾಗ ಮನೆಗೆ ಹೋಗುತ್ತಿದ್ದ ಉಮೇಶ್ ಮಠದಬೆಟ್ಟು ಎಂಬ ಯುವಕ ಧಾವಿಸಿ ಏಕಾಏಕಿ ಅಲ್ಲೇ ಇದ್ದ ಹಗ್ಗದಲ್ಲಿ ಇಳಿದು ಬಾವಿಯಲ್ಲಿ ನೀರಿನಲ್ಲಿ ಮಗುವನ್ನು ಎತ್ತಿ ಹಿಡಿದಿದ್ದಾರೆ. ಬಳಿಕ ಮಗುವಿನ ತಂದೆ ಬಂದು ಮಗುವನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿದ್ದಾರೆ. ಬಾವಿಯಲ್ಲಿ ಮಗುವಿನ ಕುತ್ತಿಗೆವರೆಗೆ ನೀರಿದ್ದು, ಉಮೇಶ್ ಇಳಿಯುವ ವೇಳೆ ನೀರಿನಲ್ಲಿ ನಿಂತಿದ್ದನು ಎನ್ನಲಾಗಿದೆ. ಉಮೇಶ್ ಅವರ ಸಾಹಸಕ್ಕೆ ಪ್ರಸ್ತುತ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.

Related Posts

Leave a Reply

Your email address will not be published.