ಉರ್ವ ಸ್ಟೋರ್ ಅಂಬೇಡ್ಕರ್ ಭವನ ಮಂಗಳೂರಿನಲ್ಲಿ ಆಗಸ್ಟ್ 3 ಭಾನುವಾರದಂದು “ಕುಂದಾಪುರ ಕನ್ನಡ ಹಬ್ಬ -2025”

ಕುಂದಗನ್ನಡದ ನೆಲದಲ್ಲಿ ಹುಟ್ಟಿ, ಬದುಕಿಗೊಂದು ನೆಲೆಯರಸಿ ಮಂಗಳೂರಿಗೆ ಬಂದು ಸೇರಿ, ಇಲ್ಲಿಯವರಾದವರೆಲ್ಲರೂ ಸೇರಿ, ತಮ್ಮ ಮೂಲ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ “ಕುಡ್ಲದಗಿಪ್ಪ ಕುಂದಾಪ್ರದರ್” ಎಂಬ ವಾಟ್ಸಾಪ್ ಬಳಗವನ್ನು ರಚಿಸಿಕೊಂಡಿದ್ದಾರೆ. ಈಗ ಈ ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆ 650ನ್ನು ಮೀರಿದೆ.
ಈ ವಾಟ್ಸಾಪ್ ಬಳಗದ ಸದಸ್ಯರೆಲ್ಲರೂ ಸೇರಿ , ಕಳೆದ ಐದು ವರ್ಷಗಳಿಂದ, ಆಷಾಢ ಮಾಸದ ಒಂದು ದಿನದಂದು “ಕುಂದಾಪ್ರ ಕನ್ನಡ ಹಬ್ಬ” ಆಚರಿಸುತ್ತಾ ಬಂದಿದ್ದಾರೆ.
ಪ್ರತಿವರ್ಷದಂತೆ, ಈ ವರ್ಷವೂ ” ಕುಂದಾಪ್ರ ಕನ್ನಡ ಹಬ್ಬ 2025″ ನ್ನು ಆಗಸ್ಟ್ 3, 2025 ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 7ರತನಕ, ಅಂಬೇಡ್ಕರ್ ಭವನ, ಉರ್ವ ಸ್ಟೋರ್ಸ್ ಮಂಗಳೂರಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಆಯೋಜನಾ ಸಮಿತಿಯ ಕಾರ್ಯದರ್ಶಿಯವರಾದ ಶ್ರೀಮತಿ ಲಿಖಿತಾ ಶೆಟ್ಟಿ ಬೂದಾಡಿಯವರು ತಿಳಿಸಿರುತ್ತಾರೆ.

ಕಾರ್ಯಕ್ರಮದ ದಿನ ಬೆಳಿಗ್ಗೆ 9.30 ರಿಂದ, ಗ್ರಾಮೀಣ ವೈವಿಧ್ಯ ಆಟೋಟ ಮತ್ತು ಸ್ಪರ್ಧೆಗಳಾದ ಮೂರು ಕಾಲಿನ ಓಟ, ಮಡಲು ನೇಯುವುದು, ಗೇರುಬೀಜದ ಗುರಿ, ರಂಗೋಲಿ, ಹೂವಿನ ಸರ ಮಾಡುವುದು ಹಾಗು ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 9.30 ಗೆ ಆಟೋಟ ಕ್ರೀಡಾ ಕೂಟವನ್ನು, ಡಾ ರವೀಶ್ ತುಂಗ, ಅಧ್ಯಕ್ಷರು, ಮನಸ್ವಿನಿ ತುಂಗ ಫ್ಯಾಮಿಲಿ ಟ್ರಸ್ಟ್ ಮಂಗಳೂರು, ಉದ್ಘಾಟಿಸಲಿದ್ದಾರೆ.
ಕುಂದಾಪ್ರ ಕನ್ನಡ ಹಬ್ಬದ ಸಂಬಂಧ “ಆಸಾಡಿ ವಡ್ರ್ ನುಡಿ ತೇರು” ಎನ್ನುವ ಕುಂದಗನ್ನಡದ ದೇವ,ದೈವಗಳ ವಿಶೇಷತೆಗಳ ಬಗ್ಗೆ, ಬರಹಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಯುವ ಪೀಳಿಗೆಯ ಆಸಕ್ತಿಯ “ಆಸಾಡಿ ಹಬ್ಬದ ರೀಲ್ಸ್” ಸ್ಪರ್ಧೆ ಕೂಡಾ ಇರುತ್ತದೆ.
ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು,ಬಳಗದ ಸದಸ್ಯರಿಂದ ನಾಟಕ, ಪ್ರಹನ, ಡಾನ್ಸ್, ಜೊತೆಗೆ, “ಕಲಾಂಜಲಿ ಕಲಾ ತಂಡ ಬ್ರಹ್ಮಾವರ” ದವರಿಂದ “ಗೌಜಿ ಗಮ್ಮತ್ತ್” ಮನೋರಂಜನಾ ಕಾರ್ಯಕ್ರಮ ಕೂಡಾ ಇರುತ್ತದೆ.
ಸಭಾ ಕಾರ್ಯಕ್ರಮ ಸಂಜೆ ನಾಲ್ಕಕ್ಕೆ ಆರಂಭವಾಗಲಿದೆ.
ಆಯೋಜನಾ ಸಮಿತಿ 2025 ರ ಅಧ್ಯಕ್ಷರಾದ ಶ್ರೀಮತಿ ಮಾಲಾ ಶೆಟ್ಟಿ, ಬಾರ್ಕೂರು, ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕಿಶೋರ್ ಕುಮಾರ್ ಕುಂದಾಪುರ, (ಅಧ್ಯಕ್ಷರು “ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್”) CA ಎಸ್ ಎಸ್ ನಾಯಕ್, ಪ್ರೊ ಬಾಲಕೃಷ್ಣ ಶೆಟ್ಟಿ ಯವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ದೀಪಕ್ ಶೆಟ್ಟಿ ಬಾರ್ಕೂರು , ( ಅಧ್ಯಕ್ಷರು,ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು) ರವರು ನೆರವೇರಿಸಲಿದ್ದಾರೆ.

ಅಲ್ಲದೇ ಈ ಸಂದರ್ಭದಲ್ಲಿ, ಕುಂದಗನ್ನಡ ನೆಲದ ಸಾಧಕರಾದ ಡಾ. ಅಣ್ಣಯ್ಯ ಕುಲಾಲ್ (ಡಾ ಬಿ.ಸಿ.ರಾಯ್ ಸಮುದಾಯ ಸೇವಾ ರಾಷ್ಟ್ರೀಯ ಪ್ರಶಸ್ತಿ 2025ರ ಪುರಸ್ಕೃತರು) ಮತ್ತು CA ಶಾಂತರಾಮ ಶೆಟ್ಟಿ (ಅಧ್ಯಕ್ಷರು ರೆಡ್ ಕ್ರಾಸ್ ಮಂಗಳೂರು) ರವರನ್ನು ಸನ್ಮಾನಿಸಲಾಗುವುದು. SSLC ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆಯ್ದ ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ.
ರಾತ್ರಿ 7.30 ಯಿಂದ ಕುಂದಗನ್ನಡದ “ವಿಶೇಷ ಖಾಧ್ಯ ವೈವಿಧ್ಯ” ವ್ಯವಸ್ಥೆ ಮಾಡಲಾಗಿದೆ ಎಂದು, ಕಾರ್ಯಕ್ರಮ ಸಂಘಟನಾ ಸಮಿತಿ ಪ್ರಕಟಿಸಿರುತ್ತಾರೆ.
